Thursday, June 23, 2011

ಮತ್ತೊಂದು ವಿಶ್ವ ಪರಿಸರ ದಿನಾಚರಣೆ: ಹೆಚ್ಚಳವಾಗಲಿರುವ ಕರ್ನಾಟಕದ ತಾಪಮಾನ



ರಾಜಸ್ತಾನದ ನಂತರ ವೈಪರೀತ್ಯ ಭೀತಿ ಕಾಣುವ ಕರ್ನಾಟಕ :
ವಿಶ್ವದೆಲ್ಲೆಡೆ ಕಾರ್ಪೋರೇಟ್ ಕಂಪನಿಗಳಾದಿಯಾಗಿ ಎಲ್ಲ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಜೂನ್ 6ರಂದು ಮತ್ತೊಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ದವಾಗುತ್ತಿವೆ. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರ ರಚಿಸಿದ್ದ ಬೆಂಗಳೂರು ಹವಾಮಾನ ಬದಲಾವಣೆ ಇನಿಷಿಯೇಟಿವ್ - ಕರ್ನಾಟಕ ಎಂಬ ಸಮಿತಿಯು ಸಲ್ಲಿಸಿರುವ ವರದಿ ನಮ್ಮ ರಾಜ್ಯದ ಮೇಲೆ ಉಂಟಾಗುವ ಹವಾಮಾನ್ ವೈಪರೀತ್ಯಗಳ ಅಪಾಯಗಳ ಕುರಿತು ಕರೆಗಂಟೆ ಒತ್ತಿದೆ ಎನ್ನಬಹುದು. ಪರಿಸರ ಸಂರಕ್ಷಣೆ ಮಾಡದೇ ಹೀಗೆ ಸುಮ್ಮನಿದ್ದಲ್ಲಿ 2030 ರ ವೇಳೆಗೆ ನಮ್ಮ ರಾಜ್ಯದ ಶೇ. 38ರಷ್ಟು ಅರಣ್ಯ ನಾಶವಾಗುತ್ತದೆಂದು ಮತ್ತು ರಾಜ್ಯದ ಬಹುತೇಕ ಪ್ರದೇಶಗಳ ಉಷ್ಣಾಂಶ 1.8 ಡಿಗ್ರಿಯಿಂದ 2.2 ಡಿಗ್ರಿವರೆಗೆ ಹೆಚ್ಚಳವಾಗುತ್ತದೆಂದು ಇದು ತಿಳಿಸಿದೆ. ಇಡೀ ದೇಶದಲ್ಲಿ ರಾಜಸ್ತಾನದ ನಂತರ ಹವಾಮಾನ ವೈಪರೀತ್ಯಗಳಿಂದ ಸಂಕಷ್ಟಕ್ಕೀಡಾಗುವ ಎರಡನೇ ರಾಜ್ಯ ಕರ್ನಾಟಕ.


ಋತುಚಕ್ರಗಳ ಅವಧಿಯಲ್ಲಿ ಬದಲಾವಣೆ:
ಮೂರು ಕಾಲಗಳ (ಬೇಸಿಗೆ, ಮಳೆ ಮತ್ತು ಚಳಿಗಾಲ) ಬದಲಾವಣೆ ಮತ್ತು ಈ ಋತುಮಾನಗಳ ಅವಧಿಯಲ್ಲಿ ಉಂಟಾಗುವ ಏರುಪೇರು ಹವಾಮಾನ ಬದಲಾವಣೆಯ ಸೂಚ್ಯಂಕ ಎನ್ನಬಹುದು. ಜಾಗತಿಕ ಪರಿಸರದಲ್ಲಿ ಶಕ್ತಿ ಚಕ್ರದ (ಶಕ್ತಿ ಚಕ್ರವು ಸೌರಶಕ್ತಿ, ವಾಯು, ಒತ್ತಡ, ಉಷ್ಣಾಂಶ ಇವೆಲ್ಲವನ್ನು ಒಳಗೊಂಡಿರುತ್ತದೆ) ಮೇಲೆ ಉಂಟಾಗುವ ಎಲ್ಲ ರೀತಿಯ ಏರುಪೇರುಗಳನ್ನು ಋತುಮಾನದ ಏರುಪೇರುಗಳು ನಮಗೆ ತೋರಿಸಿಕೊಡುತ್ತವೆ. ಹೀಗೆ ಉಂಟಾಗುವ ಏರುಪೇರು ನಮ್ಮ ಜೀವವ್ಯವಸ್ಥೆಯಲ್ಲಿ ಜೀವ ಸಮತೋಲನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಮತ್ತು ಕೃಷಿ ಹಾಗೂ ಜಲ ಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಲವು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಮುಂದಿನ 25 ಅಥವಾ 50 ವರ್ಷಗಳಲ್ಲಿ ಭೂಮಿಯ ಮೇಲೆ ಯಾವ ತಾಪಮಾನ, ಮಳೆ ಪ್ರಮಾಣ ಇರುತ್ತದೆ ಎಂದು ಅಂದಾಜು ಮಾಡಲು ಸಾಧ್ಯ.


ಈ ವರದಿಯು ಏರುತ್ತಿರುವ ಭೂಮಿಯ ತಾಪಮಾನದಿಂದ ಹವಾಮಾನ ವೈಪರೀತ್ಯ, ಬದಲಾಗಲಿರುವ ಹವಾಮಾನ ಸೂಚ್ಯಂಕಗಳು, ಅರಣ್ಯ, ಜಲ ಸಂಪನ್ಮೂಲ ಮತ್ತು ಕೃಷಿ ವಲಯದ ಮೇಲುಂಟಾಗುವ ಅಪಾಯ, ಇದರಿಂದುಂಟಾಗುವ ಸಾಮಾಜಿಕ-ಆರ್ಥಿಕ ಹೊಡೆತಗಳು ಮತ್ತು ಇಂಧನ ಕ್ಷೇತ್ರದಲ್ಲಿ ನಾವು ಮಾಲಿನ್ಯ ತಡೆಗಟ್ಟಲು ಇರುವ ವಿಧಾನಗಳು, ಇತ್ಯಾದಿ ಕುರಿತು ವಿವರಗಳನ್ನು ಒಳಗೊಂಡಿದೆ. ಉದಾಹರಣೆಗೆ, ಸಸ್ಯಜೀವಿಗಳಲ್ಲಿ ಕಂಡುಬರುವ ರೋಗಗಳ ಮೇಲೆ ಹವಾಮಾನ ವೈಪರೀತ್ಯವು ಉಂಟುಮಾಡುವ ದುಷ್ಪರಿಣಾಮವೆಂದರೆ: ಸಸ್ಯ ರೋಗಗಳಿಂದ ನಷ್ಟದ ಮತ್ತಷ್ಟು ಹೆಚ್ಚಳ, ರೋಗ ನಿರ್ವಹಣಾ ತಂತ್ರಗಳಿಗೆ ಮತ್ತಷ್ಟು ವ್ಯಯ, ಸಸ್ಯರೋಗಗಳು ಹೊಸ ಹೊಸ ಭೂಭಾಗಗಳಿಗೆ ಹರಡುವುದು,ಇತ್ಯಾದಿ.

ಉಷ್ಙಾಂಶ ಮತ್ತು ಮಳೆ ಪ್ರಮಾಣದಲ್ಲಿ ಏರುಪೇರು:

2001-07 ರವರೆಗಿನ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದ್ದು, ದಟ್ಟ ಅರಣ್ಯ ಪ್ರದೇಶವಂತೂ ಶೇ. 8ರಷ್ಟು ಕಡಿಮೆಯಾಗಿದೆ. ಅಂದರೆ ಕೇವಲ 7 ವರ್ಷಗಳ ಅವಧಿಯಲ್ಲಿ ಸುಮಾರು 2,500 ಚದುರ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದಕ್ಕೆ ಹೋಲಿಸಿದರೆ, ಬೆಂಗಳೂರು ನಗರದ ವಿಸ್ತೀರ್ಣ 741 ಚದುರ ಕಿ.ಮೀ ಇದ್ದು, ಬೆಂಗಳೂರು ನಗರದ ವಿಸ್ತೀರ್ಣಕ್ಕಿಂತ 3 ಪಟ್ಟು ಹೆಚ್ಚು ಅರಣ್ಯ ನಾಶವಾಗಿದೆ ಎನ್ನಬಹುದು. 1954ರಿಂದ 2004 ರ 50 ವರ್ಷಗಳ ಅವಧಿಯಲ್ಲಿ ಶೇ. 6 ರಷ್ಟು ಮಳೆ ಬೀಳುವ ಪ್ರಮಾಣ ಕಡಿಮೆಯಾಗಿರುವುದು ಕಳವಳಕಾರಿಯಾದ ಅಂಶ. ಮಳೆ ಏರುಪೇರು ಉಂಟಾಗುವ ಪ್ರದೇಶಗಳೆಂದರೆ: ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಕೋಲಾರ, ಮಂಡ್ಯ ಮತ್ತು ತುಮಕೂರು. ಉಷ್ಣಾಂಶ ಹೆಚ್ಚಳ ಕಂಡುಬರುವ ಜಿಲ್ಲೆಗಳು: ರಾಯಚೂರು, ಬಿಜಾಪುರ, ಗುಲ್ಬರ್ಗ ಮತ್ತು ಯಾದಗಿರಿ ಎಂದು ವರದಿ ದಾಖಲಿಸಿದೆ. ಕೃಷ್ಣ ಜಲಾನಯನ ಪ್ರದೇಶದ 6 ಜಿಲ್ಲೆಗಳಲ್ಲಿ ಮಳೆ ಪ್ರಮಾಣದ ಕೊರತೆಯಿಂದ ಆಗಾಗ್ಗೆ ಬರ ಉಂಟಾಗುತ್ತದೆ. ರಾಜ್ಯದ ಎಲ್ಲೆಡೆ ನೀರಿಗಾಗಿ ಆಹಾಕಾರ ಉಂಟಾಗುತ್ತದೆ ಎಂದು ವರದಿ ತಿಳಿಸಿದೆ.

ಶನಿ ಗ್ರಹಕ್ಕೆ ಕಾಟ ಕೊಡುತ್ತಿರುವ ಭೀಕರ ಸುಂಟರಗಾಳಿ!



ರಾಜಾ ವಿಕ್ರಮ ಮತ್ತು ಶನಿ ದೃಷ್ಟಿ:
ಇಡೀ ದೇವರುಗಳಲ್ಲೆಲ್ಲ ಶನಿ ದೇವರನ್ನು ಕಂಡರೆ ಹಲವರಿಗೆ ಭಯ, ಅದರಿಂದಾಗಿ ಜಾಸ್ತಿ ಭಕಿಯ್ತೂ ಎನ್ನಬಹುದು. ಶನಿ ದೃಷ್ಟಿ ಬಿದ್ದವರ ಮೇಲಂತೂ ಶನಿಯು ಉಗ್ರ ಪ್ರತಾಪಿಯಂತೆ ಉಪಟಳ ಕೊಟ್ಟು ಭೀಕರ ಶಿಕ್ಷೆ ನೀಡುತ್ತಾನೆಂದು ಹಲವು ಭಕ್ತರು ಭಾರಿ ಎಚ್ಚರಿಕೆ ಮತ್ತು ಭಯ-ಭಕ್ತಿಯಿಂದ ಅವನಿಗೆ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಪುರಾಣ ಕಾಲದಲ್ಲಿ ರಾಜಾ ವಿಕ್ರಮ ಎಂಬುವನು ಅತ್ಯುತ್ತಮವಾಗಿ ಆಳುತ್ತಿದ್ದರೂ, ಶನಿ ದೇವರಿಗೆ ಪೂಜೆ ಸಲ್ಲಿಸದೇ ನಿರ್ಲಕ್ಷ್ಯ ವಹಿಸಿದ್ದರ ಫಲವಾಗಿ ಶನಿ ಅವನ ಮೇಲೆ ಉಗ್ರ ದೃಷ್ಟಿ ಬೀರಿ ರಾಜಾ ವಿಕ್ರಮ ತನ್ನ ರಾಜ್ಯವನ್ನೇ ಕಳೆದುಕೊಂಡು ದಯನೀಯವಾಗಿ ಬದುಕುವಂತೆ ಮಾಡುವ ಕಥೆ ಎಲ್ಲಿರಿಗೂ ಚಿರಪರಿಚಿತ.

ಆದರೆ ವಾಸ್ತವವೆಂದರೆ ನಮ್ಮ ಖಗೋಳ ಭೌತಶಾಸ್ತ್ರ ಮತ್ತು ಅದಕ್ಕೆ ಪೂರಕವಾಗಿ ನಮ್ಮ ಭೂಮಿಯಿಂದ ದೂರದಲ್ಲಿರುವ ಇತರೆ ಗ್ರಹಗಳ ನಮ್ಮ ಜ್ಞಾನ, ಆ ಗ್ರಹಗಳ ಬಳಿಗೆ ಕಣ್ಣು ಹಾಯಿಸುವ ಪರಿಣಾಮಕಾರಿ ದೂರದರ್ಶಕಗಳು, ಆಕಾಶಯಾನಗಳು ಹೆಚ್ಚಿದಂತೆಲ್ಲ ಸೂರ್ಯನ ಸುತ್ತಲಿರುವ ಗ್ರಹ ಪರಿವಾರಗಳ ಕುರಿತು ನಮಗೆ ಹೆಚ್ಚಿನ ತಿಳುವಳಿಕೆ ಲಭಿಸಿದೆ. ಇದರಿಂದ ಜ್ಯೋತಿಷಿಗಳು ಮತ್ತು ಕಂದಾಚಾರಿಗಳ ಪುರಾಣ, ಭವಿಷ್ಯತ್-ನುಡಿಗಳೆಲ್ಲವೂ ಕಾಗೆ-ಗೂಬಕ್ಕನ ಕಥೆಗಳೆಂಬುದನ್ನು ಜನಸಾಮಾನ್ಯರು ತಿಳಿದುಕೊಳ್ಳುವ ಸ್ಥಿತಿಯಿದೆ.




ಶನಿ ಗ್ರಹದ ಮೇಲೆರಗಿರುವ ಸುಂಟರಗಾಳಿ:
ಶನಿ ಗ್ರಹದ ಉತ್ತರ ಧ್ರುವದಲ್ಲಿ ಭೀಕರ ಸ್ವರೂಪಿ ಸುಂಟರಗಾಳಿ ಎದ್ದಿದ್ದು, ಅದು ಇಡೀ ಶನಿ ಗ್ರಹದ ತುಂಬೆಲ್ಲ ಹರಡಿಕೊಂಡಿದೆ ಎಂದು ಅಮೇರಿಕಾದ ಕ್ಯಾಸಿನಿ ಗಗನನೌಕೆ ಮತ್ತು ಯೂರೋಪ್ ಗಗನ ವೀಕ್ಷಣಕೇಂದ್ರವು ಭೂಮಿಯಲ್ಲಿ ಅಳವಡಿಸಿರುವ ದೂರದರ್ಶಕಗಳೆರಡೂ ವರದಿ ಮಾಡಿವೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾವು ಈ ಕ್ಯಾಸಿನಿ ಗಗನನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಈ ಸುಂಟರಗಾಳಿ ಅದೆಷ್ಟು ಬಲಯುತವಾಗಿದೆಯೆಂದರೆ ಅದು ಇಡೀ ಶನಿ ಗ್ರಹದ ವಾತಾವರಣದ ತುಂಬೆಲ್ಲ ಅನಿಲಭರಿತ ಧೂಳನ್ನು ಹರಡುತ್ತಿದೆ. ಕ್ಯಾಸಿನಿ ಗಗನನೌಕೆಯಲ್ಲಿದ್ದ ರೇಡಿಯೋ ಮತ್ತು ಪ್ಲಾಸ್ಮಾ ತರಂಗಾಂತರ ಉಪಕರಣಗಳು ಮೊದಲಿಗೆ ಸುಂಟರಗಾಳಿಯನ್ನು ಗಮನಿಸಿದವು. ಕ್ಯಾಸಿನಿ ಗಗನನೌಕೆಯ ಅತಿ ನೇರಳೆ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್ ಎಂಬ ಉಪಕರಣವು ಈ ಸುಂಟರಗಾಳಿಯು ಹಿಂಸಾತ್ಮಕ ರೂಪ ತಳೆದು ಅಮೋನಿಯಾ ಅನಿಲವನ್ನು ಎಲ್ಲೆಡೆ ಹರಡುತ್ತಿದೆ ಎಂದು ದಾಖಲಿಸಿದೆ. ಈ ದೊಡ್ಡ ಸುಂಟರಗಾಳಿಯ ಅಗಲ ಸುಮಾರು 5,000 ಕಿಲೋ ಮೀಟರ್ ಇದೆ. ಈ ಸುಂಟರಗಾಳಿಯಿಂದ ಶನಿ ಗ್ರಹದ ವಾತಾವರಣದ ಗಾಳಿಯ ಚಲನೆಯು ತೀವ್ರತರದಲ್ಲಿ ಮಾರ್ಪಾಟಾಗಿದ್ದು ಅಲ್ಲಿನ ಶಕ್ತಿ ಮತ್ತು ವಸ್ತುಗಳನ್ನು ದೂರ ಪ್ರದೇಶಗಳಿಗೆ ದಿಕ್ಕಾಪಾಲಾಗಿ ಚೆಲ್ಲಾ ಪಿಲ್ಲಿಯಾಗಿಸಿದೆ.



ನಮ್ಮ ಭೂಮಿಯಿಂದ ಸುಮಾರು 51 ಕಿಲೋ ಮೀಟರ್ ವರೆಗೆ ಚಾಚಿರುವ ಸ್ಟ್ರ್ಯಾಟೋಸ್ಪಿಯರ್ ಎಂದು ಕರೆಯಲಾಗುವ ವಾತಾವರಣದ ಗಡಿಯ ಕೆಳ ಹಂತದಲ್ಲಿ ಸಾಮಾನ್ಯವಾಗಿ ವಿಮಾನಯಾನ ಮಾಡುವುದನ್ನು ತಪ್ಪಿಸಿ ಇದರ ಮೇಲ್-ಹಂತದಲ್ಲಿ ಯಾನ ಮಾಡಲಾಗುತ್ತದೆ. ಏಕೆಂದರೆ ಈ ಕೆಳ ಹಂತದಲ್ಲಿ ವಾತಾವರಣದಲ್ಲಿನ ವಾಯು ವೇಗ, ಒತ್ತಡ, ಉಷ್ಣತೆ ಇತ್ಯಾದಿಗಳ ಏರಿಳಿತಗಳು ಹೆಚ್ಚಿರುತ್ತವೆ. ಆದರೆ ಶನಿ ಗ್ರಹದ ಸ್ಟ್ರ್ಯಾಟೋಸ್ಪಿಯರ್ ಮೇಲ್-ಹಂತದ ಎತ್ತರದಲ್ಲಿಯೂ ಕೂಡ ಸುಂಟರಗಾಳಿಯ ಪ್ರವಾಹ ಚಿಮ್ಮುತ್ತಿದೆ ಎನ್ನಲಾಗಿದೆ.

ಶನಿ ಗ್ರಹದ ವಾತಾವರಣ ಮತ್ತು ಉಪಗ್ರಹಗಳು:
ಶನಿ ಗ್ರಹವು ಸೂರ್ಯ ಪರಿವಾರದಲ್ಲಿ ಜ್ಯೂಪಿಟರ್ ನಂತರ ಎರಡನೇ ಅತಿ ದೊಡ್ಡ ಗ್ರಹವೆನಿಸಿದೆ. ಆದರೆ ಸೂರ್ಯನಿಂದ ದೂರವಿರುವ 6ನೇ ಗ್ರಹವಾಗಿದೆ. ಇದು ಭೂಮಿಯಿಂದ ಸುಮಾರು 1,20,000 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಶನಿ ಗ್ರಹದ ತೂಕ ನಮ್ಮ ಭೂಮಿಯ ಒಟ್ಟಾರೆ ತೂಕದ ಮುಕ್ಕಾಲು ಪ್ರಮಾನದ ತೂಕ ಮಾತ್ರವಿದ್ದರೂ ಆಕಾರದಲ್ಲಿ ಭೂಮಿಯ 95 ಪಟ್ಟು ದೊಡ್ಡದಿದೆ. ಶನಿ ಗ್ರಹವು ತನ್ನ ಸುತ್ತ ಆವರಿಸಿರುವ ಒಂಬತ್ತು ಬಳೆಗಳನ್ನು ಹೊಂದಿದ್ದು, ಈ ಬಳೆಗಳು ಮಂಜುಗಡ್ಡೆಯ ಕಣಗಳು, ಬಂಡೆಯ ಚೂರುಗಳು ಮತ್ತು ಧೂಳಿನಿಂದ ಮಾಡಲ್ಪಟ್ಟಿವೆ. ಶನಿ ಗ್ರಹವು ಸುಮಾರು ನಮ್ಮ ಚಂದ್ರನಂತಹ 62 ಉಪಗ್ರಹಗಳನ್ನು ಹೊಂದಿದ್ದು, ಅದರಲ್ಲಿ ಟೈಟಾನ್ ಎಂಬ ಉಪಗ್ರಹವೇ ದೊಡ್ಡದು.



ಗಗನನೌಕೆಗಳಿಂದ ಶನಿ ಗ್ರಹ ಸರ್ವೇಕ್ಷಣೆ:
ಶನಿ ಗ್ರಹದ ವೀಕ್ಷಣೆಯನ್ನು ಮೊದಲು ಬರಿಗಣ್ಣಿಂದ ನೋಡಲಾಗುತ್ತಿತ್ತು. 17ನೇ ಶತಮಾನದಲ್ಲಿ ಬಲು ಪರಿಣಾಮಕಾರಿಯಾದ ದೂರದರ್ಶಕಗಳನ್ನು ಅಭಿವೃದ್ಧಿಪಡಿಸಿ ವೀಕ್ಷಿಸಲಾಗುತ್ತಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ ಪಯನಿಯರ್, ವಾಯೇಜರ್ ನೌಕೆಗಳನ್ನು ಕಳುಹಿಸಲಾಯಿತು. 2004ರಲ್ಲಿ ಕ್ಯಾಸಿನಿ-ಹ್ಯೂಜೆನ್ಸ್ ಎಂಬ ಗಗನನೌಕೆಗಳು ಶನಿ ಗ್ರಹ ಪ್ರಯಾಣ ಮಾಡಿ ಆ ಗ್ರಹದ ಸುತ್ತು ಹಾಕಿ, ಗ್ರಹ ಪ್ರದೇಶಕ್ಕಿಳಿದು ಪೋಟೋ ತೆಗೆದುಕೊಂಡವು ಹಾಗೆಯೇ ಅದರ ಉಪಗ್ರಹ ಟೈಟಾನ್ ಮೇಲೆ ಓಡಾಡಿ ಸರ್ವೇಕ್ಷಣೆ ನಡೆಸಿತು. ಟೈಟಾನ್ ನಲ್ಲಿ ದೊಡ್ಡ ಸರೋವರಗಳಿರುವುದು, ಬೆಟ್ಟ ಗುಡ್ಡಗಳು, ದ್ವೀಪಗಳಿರುವ ಚಿತ್ರಗಳನ್ನು ನಮಗೆ ನೀಡಿದೆ.
*******

Wednesday, June 22, 2011

ಸೋವಿಯತ್ ಒಕ್ಕೂಟದ ಐತಿಹಾಸಿಕ ಗಗನಯಾನ: ಯೂರಿ ಗಗಾರಿನ್ ಗಗನಯಾನಕ್ಕೆ 50 ವರ್ಷಗಳ ಸಂಭ್ರಮಾಚರಣೆ




1961ರ ಏಪ್ರಿಲ್ 12 ರಂದು ಇಡೀ ವಿಶ್ವದ ಜನತೆಯನ್ನು ದಿಘ್ಮೂಡರನ್ನಾಗಿಸಿದಂತ ಘಟನೆಗೆ ಮನುಕುಲ ಸಾಕ್ಷಿಯಾಯಿತು. ಮರಗೆಲಸಗಾರನ ಮಗನಾಗಿದ್ದ ಗಗನಯಾನಿ ಯೂರಿ ಗಗಾರಿನ್ ರನ್ನು ಹೊತ್ತ ವೊಸ್ತಕ್ ಎಂಬ ಗಗನನೌಕೆಯು ಕಜಕ್ಸ್ತಾನದ ನಿಲ್ದಾಣದಿಂದ ರಾಕೆಟ್ ವೇಗದಲ್ಲಿ ಗಗನಕ್ಕೆ ಹಾರಿ ಭೂಮಿಯ ಸುತ್ತ 79 ನಿಮಿಷಗಳ ಕಾಲ ಪ್ರದಕ್ಷಿಣೆ ಹಾಕಿ ವಾಪಸಾಯಿತು. ಆದರೆ ವಾಪಸಾಗುವಾಗ ಕೆಲವು ತಾಂತ್ರಿಕ ತೊಂದರೆಗಳಿಂದ ಎಲ್ಲರೂ ಆತಂಕಗೊಂಡ ಕ್ಷಣವದು. ಅಂತಿಮವಾಗಿ ಗಗಾರಿನ್ ವೋಲ್ಗಾ ನದಿಯ ಬಳಿ ಪ್ಯಾರಾಚೂಟ್ನಿಂದ ಜಿಗಿದು ಬಂದರು. ಅಷ್ಟರಲ್ಲಿಯೇ ಯೂರಿ ಗಗಾರಿನ್ ಸೋವಿಯತ್ ಒಕ್ಕೂಟದ ರಾಷ್ಟ್ರೀಯ ಹೀರೋ ಮಾತ್ರ ಆಗಿದ್ದಲ್ಲದೇ ಇಡೀ ವಿಶ್ವದ ಜನತೆಯ ನಾಲಗೆಯ ಮೇಲೆ ಅವರ ಹೆಸರು ಕುಣಿದಾಡಿತು.



ಮನುಕುಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮನುಷ್ಯ ಗಗನಯಾನ ಮಾಡಿದ್ದು ವಿಶ್ವದ ತುಂಬೆಲ್ಲ ರೋಮಾಂಚನವುಂಟು ಮಾಡಿದರೆ ಸಮಾಜವಾದಿ ಸೋವಿಯತ್ ಒಕ್ಕೂಟದ ಕಡುವೈರಿಯಾಗಿದ್ದ ಸಾಮ್ರಾಜ್ಯಶಾಹಿ ಅಮೇರಿಕಾಗೆ ಒಳಗೊಳಗೆ ನಡುಕ ಉಂಟಾಗಿತ್ತು. ಏಕೆಂದರೆ ಗಗನಯಾನ ತಂತ್ರಜ್ಞಾನದಲ್ಲಿ ಈ ಘಟನೆ ಸೋವಿಯತ್ ರಷ್ಯಾ ಒಕ್ಕೂಟದ ಮೇಲುಗೈ ಹೊಂದಿರುವುದಕ್ಕೆ ಸಾಕ್ಷಿಯಾಗಿತ್ತು. ಇದಾದ ನಾಲ್ಕು ತಿಂಗಳಿಗೆ ಮತ್ತೆ ಘೆರ್ಮನ್ ಟೈಟವ್ ಎಂಬ ಗಗನಯಾನಿಯನ್ನು ಹೊತ್ತು ಮತ್ತೊಂದು ಗಗನನೌಕೆ ಭೂಮಿಯನ್ನು 25 ಘಂಟೆ ಕಾಲ 17 ಬಾರಿ ಪ್ರದಕ್ಷಿಣೆ ಹಾಕಿತು. ಸೋವಿಯತ್ ಒಕ್ಕೂಟದ ರಾಕೆಟ್ ತಂತ್ರಜ್ಞಾನದ ಜನಕ ಎಂದೇ ಹೆಸರಾಗಿರುವ ಸೇಗರ್ ಕೊರೊಲ್ಯೊವ್ ರವರು ಈ ತಂತ್ರಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಈ ಘಟನೆ 1917ರ ಅಕ್ಟೋಬರ್ ಕ್ರಾಂತಿಯಂತೆಯೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸೋವಿಯತ್ ಒಕ್ಕೂಟ ಹೊಂದಿರುವ ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.


ಇದರಿಂದ ವಿಚಲಿತಗೊಂಡ ಅಮೇರಿಕಾ 1961ರ ಮೇ ತಿಂಗಳಲ್ಲಿ ಒಂದು ಗಗನನೌಕೆಯನ್ನು ಹಾರಿಬಿಟ್ಟಿತಾದರೂ ಅದು ಕೇವಲ 15 ನಿಮಿಷ ಮಾತ್ರವೇ ಹಾರಾಡಿತು. 1962ರಲ್ಲಿಯೂ ಮತ್ತೊಂದು ಅಮೇರಿಕಾದ ಗಗನನೌಕೆ ಕೇವಲ 3 ಪ್ರದಕ್ಷಿಣೆ ಹಾಕಿ ಹಿಂದಿರುಗಿತು. ಯೂರಿಗಗಾರಿನ್ ಗಗನಯಾನ ಮಾಡಿದ್ದು ಅಮೇರಿಕಾದ ಮೇಲೆ ಅದೆಷ್ಟು ಒತ್ತಡ ಉಂಟು ಮಾಡಿತೆಂದರೆ, ಗಗಾರಿನ್ ಯಾನದ ಒಂದು ತಿಂಗಳ ನಂತರ ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಒಂದು ಅಧಿಕೃತ ಘೋಷಣೆ ಹೊರಡಿಸಿ ಆ ದಶಕದೊಳಗೆ ಅಮೇರಿಕಾ ಚಂದ್ರನ ಬಳಿಗೆ ಮಾನವನನ್ನು ಒತ್ತೊಯ್ಯಲಿದೆ ಎಂದರು. ಕೊನೆಗೆ ಅದು ನನಸಾಗಿದ್ದು 1969ರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಚಂದ್ರ ಗ್ರಹದಲ್ಲಿ ಪಾದಾರ್ಪಣೆ ಮಾಡಿದಾಗಲೇ.

ಅಮೇರಿಕಾ ಕೊಲಂಬಿಯಾ, ಛಾಲೆಂಜರ್, ಡಿಸ್ಕವರಿ, ಅಟ್ಲಾಂಟಿಸ್, ಮತ್ತು ಎಂಡೇವರ್ ಎಂಬ ಗಗನನೌಕೆಗಳನ್ನು ಒಂದಾದ ನಂತರ ಮತ್ತೊಂದರಂತೆ ಕಳುಹಿಸಿತು. ಸೋವಿಯತ್ ಒಕ್ಕೂಟ ಛಿದ್ರಗೊಂಡ ನಂತರ ಅಮೇರಿಕಾ ಗಗನಯಾನ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿತು. ಇತ್ತೀಚೆಗೆ 16 ರಾಷ್ಟ್ರಗಳು ಒಗ್ಗೂಡಿ ಗಗನದಲ್ಲಿ ನಿರ್ಮಿಸಿರುವ ಅಂತರಾಷ್ಟ್ರೀಯ ಗಗನ ನಿಲ್ದಾಣ, ಅಮೇರಿಕಾ ಮತ್ತು ಯೂರೋಪಿಯನ್ ಒಕ್ಕೂಟದ ಹಬಲ್ ಗಗನ ದೂರದರ್ಶಕ ಮತ್ತು ಚೀನಾ ಮತ್ತು ಭಾರತ ದೇಶಗಳು ಚಂದ್ರಯಾನದಂಥಹ ಯೋಜನೆಗಳನ್ನು ಹಮ್ಮಿಕೊಂಡಿರುವುದು ಗಗನ ಶೋಧನೆಯ ಹೆಜ್ಜೆಗಳನ್ನು ತೀವ್ರಗೊಳಿಸಿವೆ.


ಸೋವಿಯತ್ ಒಕ್ಕೂಟದ ಪತನದ ನಂತರ ಹಿಂದಿನ ಅವಧಿಯಲ್ಲಿ ಆ ದೇಶ ಅಭಿವೃದ್ಧಿ ಪಡಿಸಿದ್ದ ಇಂತಹ ಹಲವಾರು ಅತ್ಯದ್ಭುತ ತಂತ್ರಜ್ಞಾನಗಳನ್ನು ಜೋಪಾನದಿಂದ ಕಾಪಾಡಿ ಮತ್ತಷ್ಟು ಅಭಿವೃದ್ಧಿಪಡಿಸಿ ಮುಂದೊಯ್ಯಲಾಗದೇ ಅಲ್ಲಿನ ಸಕರ್ಾರಗಳು ಅವನ್ನು ಹಾಳು ಮಾಡಿವೆಯೆಂದು ಹಲವಾರು ವಿಜ್ಞಾನಿಗಳು ಇಂದಿಗೂ ದೂರುತ್ತಾರೆ.

ಯೂರಿ ಗಗಾರಿನ್ ಆಕಾಶಯಾನ ಮಾಡಿದ ದಿನವೆಂದು ಪ್ರತಿ ವರ್ಷ ಏಪ್ರಿಲ್ 12ರಂದು ರಷ್ಯಾದಲ್ಲಿ "ಕಾಸ್ಮೋನಾಟ್ ದಿನ" ಎಂದು ಆಚರಿಸುತ್ತಿದ್ದರು. ಈ ವರ್ಷದಿಂದ ವಿಶ್ವಸಂಸ್ಥೆಯು ಈ ದಿನವನ್ನು "ಅಂತರಾಷ್ಟ್ರೀಯ ಮಾನವ ಆಕಾಶಯಾನದ ದಿನ" ಎಂದು ಘೋಷಿಸಿದೆ.
**********