Thursday, June 23, 2011

ಮತ್ತೊಂದು ವಿಶ್ವ ಪರಿಸರ ದಿನಾಚರಣೆ: ಹೆಚ್ಚಳವಾಗಲಿರುವ ಕರ್ನಾಟಕದ ತಾಪಮಾನ



ರಾಜಸ್ತಾನದ ನಂತರ ವೈಪರೀತ್ಯ ಭೀತಿ ಕಾಣುವ ಕರ್ನಾಟಕ :
ವಿಶ್ವದೆಲ್ಲೆಡೆ ಕಾರ್ಪೋರೇಟ್ ಕಂಪನಿಗಳಾದಿಯಾಗಿ ಎಲ್ಲ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಜೂನ್ 6ರಂದು ಮತ್ತೊಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲು ಸಿದ್ದವಾಗುತ್ತಿವೆ. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರ ರಚಿಸಿದ್ದ ಬೆಂಗಳೂರು ಹವಾಮಾನ ಬದಲಾವಣೆ ಇನಿಷಿಯೇಟಿವ್ - ಕರ್ನಾಟಕ ಎಂಬ ಸಮಿತಿಯು ಸಲ್ಲಿಸಿರುವ ವರದಿ ನಮ್ಮ ರಾಜ್ಯದ ಮೇಲೆ ಉಂಟಾಗುವ ಹವಾಮಾನ್ ವೈಪರೀತ್ಯಗಳ ಅಪಾಯಗಳ ಕುರಿತು ಕರೆಗಂಟೆ ಒತ್ತಿದೆ ಎನ್ನಬಹುದು. ಪರಿಸರ ಸಂರಕ್ಷಣೆ ಮಾಡದೇ ಹೀಗೆ ಸುಮ್ಮನಿದ್ದಲ್ಲಿ 2030 ರ ವೇಳೆಗೆ ನಮ್ಮ ರಾಜ್ಯದ ಶೇ. 38ರಷ್ಟು ಅರಣ್ಯ ನಾಶವಾಗುತ್ತದೆಂದು ಮತ್ತು ರಾಜ್ಯದ ಬಹುತೇಕ ಪ್ರದೇಶಗಳ ಉಷ್ಣಾಂಶ 1.8 ಡಿಗ್ರಿಯಿಂದ 2.2 ಡಿಗ್ರಿವರೆಗೆ ಹೆಚ್ಚಳವಾಗುತ್ತದೆಂದು ಇದು ತಿಳಿಸಿದೆ. ಇಡೀ ದೇಶದಲ್ಲಿ ರಾಜಸ್ತಾನದ ನಂತರ ಹವಾಮಾನ ವೈಪರೀತ್ಯಗಳಿಂದ ಸಂಕಷ್ಟಕ್ಕೀಡಾಗುವ ಎರಡನೇ ರಾಜ್ಯ ಕರ್ನಾಟಕ.


ಋತುಚಕ್ರಗಳ ಅವಧಿಯಲ್ಲಿ ಬದಲಾವಣೆ:
ಮೂರು ಕಾಲಗಳ (ಬೇಸಿಗೆ, ಮಳೆ ಮತ್ತು ಚಳಿಗಾಲ) ಬದಲಾವಣೆ ಮತ್ತು ಈ ಋತುಮಾನಗಳ ಅವಧಿಯಲ್ಲಿ ಉಂಟಾಗುವ ಏರುಪೇರು ಹವಾಮಾನ ಬದಲಾವಣೆಯ ಸೂಚ್ಯಂಕ ಎನ್ನಬಹುದು. ಜಾಗತಿಕ ಪರಿಸರದಲ್ಲಿ ಶಕ್ತಿ ಚಕ್ರದ (ಶಕ್ತಿ ಚಕ್ರವು ಸೌರಶಕ್ತಿ, ವಾಯು, ಒತ್ತಡ, ಉಷ್ಣಾಂಶ ಇವೆಲ್ಲವನ್ನು ಒಳಗೊಂಡಿರುತ್ತದೆ) ಮೇಲೆ ಉಂಟಾಗುವ ಎಲ್ಲ ರೀತಿಯ ಏರುಪೇರುಗಳನ್ನು ಋತುಮಾನದ ಏರುಪೇರುಗಳು ನಮಗೆ ತೋರಿಸಿಕೊಡುತ್ತವೆ. ಹೀಗೆ ಉಂಟಾಗುವ ಏರುಪೇರು ನಮ್ಮ ಜೀವವ್ಯವಸ್ಥೆಯಲ್ಲಿ ಜೀವ ಸಮತೋಲನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಮತ್ತು ಕೃಷಿ ಹಾಗೂ ಜಲ ಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಲವು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಮುಂದಿನ 25 ಅಥವಾ 50 ವರ್ಷಗಳಲ್ಲಿ ಭೂಮಿಯ ಮೇಲೆ ಯಾವ ತಾಪಮಾನ, ಮಳೆ ಪ್ರಮಾಣ ಇರುತ್ತದೆ ಎಂದು ಅಂದಾಜು ಮಾಡಲು ಸಾಧ್ಯ.


ಈ ವರದಿಯು ಏರುತ್ತಿರುವ ಭೂಮಿಯ ತಾಪಮಾನದಿಂದ ಹವಾಮಾನ ವೈಪರೀತ್ಯ, ಬದಲಾಗಲಿರುವ ಹವಾಮಾನ ಸೂಚ್ಯಂಕಗಳು, ಅರಣ್ಯ, ಜಲ ಸಂಪನ್ಮೂಲ ಮತ್ತು ಕೃಷಿ ವಲಯದ ಮೇಲುಂಟಾಗುವ ಅಪಾಯ, ಇದರಿಂದುಂಟಾಗುವ ಸಾಮಾಜಿಕ-ಆರ್ಥಿಕ ಹೊಡೆತಗಳು ಮತ್ತು ಇಂಧನ ಕ್ಷೇತ್ರದಲ್ಲಿ ನಾವು ಮಾಲಿನ್ಯ ತಡೆಗಟ್ಟಲು ಇರುವ ವಿಧಾನಗಳು, ಇತ್ಯಾದಿ ಕುರಿತು ವಿವರಗಳನ್ನು ಒಳಗೊಂಡಿದೆ. ಉದಾಹರಣೆಗೆ, ಸಸ್ಯಜೀವಿಗಳಲ್ಲಿ ಕಂಡುಬರುವ ರೋಗಗಳ ಮೇಲೆ ಹವಾಮಾನ ವೈಪರೀತ್ಯವು ಉಂಟುಮಾಡುವ ದುಷ್ಪರಿಣಾಮವೆಂದರೆ: ಸಸ್ಯ ರೋಗಗಳಿಂದ ನಷ್ಟದ ಮತ್ತಷ್ಟು ಹೆಚ್ಚಳ, ರೋಗ ನಿರ್ವಹಣಾ ತಂತ್ರಗಳಿಗೆ ಮತ್ತಷ್ಟು ವ್ಯಯ, ಸಸ್ಯರೋಗಗಳು ಹೊಸ ಹೊಸ ಭೂಭಾಗಗಳಿಗೆ ಹರಡುವುದು,ಇತ್ಯಾದಿ.

ಉಷ್ಙಾಂಶ ಮತ್ತು ಮಳೆ ಪ್ರಮಾಣದಲ್ಲಿ ಏರುಪೇರು:

2001-07 ರವರೆಗಿನ ಅವಧಿಯಲ್ಲಿ ರಾಜ್ಯದ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದ್ದು, ದಟ್ಟ ಅರಣ್ಯ ಪ್ರದೇಶವಂತೂ ಶೇ. 8ರಷ್ಟು ಕಡಿಮೆಯಾಗಿದೆ. ಅಂದರೆ ಕೇವಲ 7 ವರ್ಷಗಳ ಅವಧಿಯಲ್ಲಿ ಸುಮಾರು 2,500 ಚದುರ ಕಿಲೋಮೀಟರ್ ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಇದಕ್ಕೆ ಹೋಲಿಸಿದರೆ, ಬೆಂಗಳೂರು ನಗರದ ವಿಸ್ತೀರ್ಣ 741 ಚದುರ ಕಿ.ಮೀ ಇದ್ದು, ಬೆಂಗಳೂರು ನಗರದ ವಿಸ್ತೀರ್ಣಕ್ಕಿಂತ 3 ಪಟ್ಟು ಹೆಚ್ಚು ಅರಣ್ಯ ನಾಶವಾಗಿದೆ ಎನ್ನಬಹುದು. 1954ರಿಂದ 2004 ರ 50 ವರ್ಷಗಳ ಅವಧಿಯಲ್ಲಿ ಶೇ. 6 ರಷ್ಟು ಮಳೆ ಬೀಳುವ ಪ್ರಮಾಣ ಕಡಿಮೆಯಾಗಿರುವುದು ಕಳವಳಕಾರಿಯಾದ ಅಂಶ. ಮಳೆ ಏರುಪೇರು ಉಂಟಾಗುವ ಪ್ರದೇಶಗಳೆಂದರೆ: ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಕೋಲಾರ, ಮಂಡ್ಯ ಮತ್ತು ತುಮಕೂರು. ಉಷ್ಣಾಂಶ ಹೆಚ್ಚಳ ಕಂಡುಬರುವ ಜಿಲ್ಲೆಗಳು: ರಾಯಚೂರು, ಬಿಜಾಪುರ, ಗುಲ್ಬರ್ಗ ಮತ್ತು ಯಾದಗಿರಿ ಎಂದು ವರದಿ ದಾಖಲಿಸಿದೆ. ಕೃಷ್ಣ ಜಲಾನಯನ ಪ್ರದೇಶದ 6 ಜಿಲ್ಲೆಗಳಲ್ಲಿ ಮಳೆ ಪ್ರಮಾಣದ ಕೊರತೆಯಿಂದ ಆಗಾಗ್ಗೆ ಬರ ಉಂಟಾಗುತ್ತದೆ. ರಾಜ್ಯದ ಎಲ್ಲೆಡೆ ನೀರಿಗಾಗಿ ಆಹಾಕಾರ ಉಂಟಾಗುತ್ತದೆ ಎಂದು ವರದಿ ತಿಳಿಸಿದೆ.

ಶನಿ ಗ್ರಹಕ್ಕೆ ಕಾಟ ಕೊಡುತ್ತಿರುವ ಭೀಕರ ಸುಂಟರಗಾಳಿ!



ರಾಜಾ ವಿಕ್ರಮ ಮತ್ತು ಶನಿ ದೃಷ್ಟಿ:
ಇಡೀ ದೇವರುಗಳಲ್ಲೆಲ್ಲ ಶನಿ ದೇವರನ್ನು ಕಂಡರೆ ಹಲವರಿಗೆ ಭಯ, ಅದರಿಂದಾಗಿ ಜಾಸ್ತಿ ಭಕಿಯ್ತೂ ಎನ್ನಬಹುದು. ಶನಿ ದೃಷ್ಟಿ ಬಿದ್ದವರ ಮೇಲಂತೂ ಶನಿಯು ಉಗ್ರ ಪ್ರತಾಪಿಯಂತೆ ಉಪಟಳ ಕೊಟ್ಟು ಭೀಕರ ಶಿಕ್ಷೆ ನೀಡುತ್ತಾನೆಂದು ಹಲವು ಭಕ್ತರು ಭಾರಿ ಎಚ್ಚರಿಕೆ ಮತ್ತು ಭಯ-ಭಕ್ತಿಯಿಂದ ಅವನಿಗೆ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಪುರಾಣ ಕಾಲದಲ್ಲಿ ರಾಜಾ ವಿಕ್ರಮ ಎಂಬುವನು ಅತ್ಯುತ್ತಮವಾಗಿ ಆಳುತ್ತಿದ್ದರೂ, ಶನಿ ದೇವರಿಗೆ ಪೂಜೆ ಸಲ್ಲಿಸದೇ ನಿರ್ಲಕ್ಷ್ಯ ವಹಿಸಿದ್ದರ ಫಲವಾಗಿ ಶನಿ ಅವನ ಮೇಲೆ ಉಗ್ರ ದೃಷ್ಟಿ ಬೀರಿ ರಾಜಾ ವಿಕ್ರಮ ತನ್ನ ರಾಜ್ಯವನ್ನೇ ಕಳೆದುಕೊಂಡು ದಯನೀಯವಾಗಿ ಬದುಕುವಂತೆ ಮಾಡುವ ಕಥೆ ಎಲ್ಲಿರಿಗೂ ಚಿರಪರಿಚಿತ.

ಆದರೆ ವಾಸ್ತವವೆಂದರೆ ನಮ್ಮ ಖಗೋಳ ಭೌತಶಾಸ್ತ್ರ ಮತ್ತು ಅದಕ್ಕೆ ಪೂರಕವಾಗಿ ನಮ್ಮ ಭೂಮಿಯಿಂದ ದೂರದಲ್ಲಿರುವ ಇತರೆ ಗ್ರಹಗಳ ನಮ್ಮ ಜ್ಞಾನ, ಆ ಗ್ರಹಗಳ ಬಳಿಗೆ ಕಣ್ಣು ಹಾಯಿಸುವ ಪರಿಣಾಮಕಾರಿ ದೂರದರ್ಶಕಗಳು, ಆಕಾಶಯಾನಗಳು ಹೆಚ್ಚಿದಂತೆಲ್ಲ ಸೂರ್ಯನ ಸುತ್ತಲಿರುವ ಗ್ರಹ ಪರಿವಾರಗಳ ಕುರಿತು ನಮಗೆ ಹೆಚ್ಚಿನ ತಿಳುವಳಿಕೆ ಲಭಿಸಿದೆ. ಇದರಿಂದ ಜ್ಯೋತಿಷಿಗಳು ಮತ್ತು ಕಂದಾಚಾರಿಗಳ ಪುರಾಣ, ಭವಿಷ್ಯತ್-ನುಡಿಗಳೆಲ್ಲವೂ ಕಾಗೆ-ಗೂಬಕ್ಕನ ಕಥೆಗಳೆಂಬುದನ್ನು ಜನಸಾಮಾನ್ಯರು ತಿಳಿದುಕೊಳ್ಳುವ ಸ್ಥಿತಿಯಿದೆ.




ಶನಿ ಗ್ರಹದ ಮೇಲೆರಗಿರುವ ಸುಂಟರಗಾಳಿ:
ಶನಿ ಗ್ರಹದ ಉತ್ತರ ಧ್ರುವದಲ್ಲಿ ಭೀಕರ ಸ್ವರೂಪಿ ಸುಂಟರಗಾಳಿ ಎದ್ದಿದ್ದು, ಅದು ಇಡೀ ಶನಿ ಗ್ರಹದ ತುಂಬೆಲ್ಲ ಹರಡಿಕೊಂಡಿದೆ ಎಂದು ಅಮೇರಿಕಾದ ಕ್ಯಾಸಿನಿ ಗಗನನೌಕೆ ಮತ್ತು ಯೂರೋಪ್ ಗಗನ ವೀಕ್ಷಣಕೇಂದ್ರವು ಭೂಮಿಯಲ್ಲಿ ಅಳವಡಿಸಿರುವ ದೂರದರ್ಶಕಗಳೆರಡೂ ವರದಿ ಮಾಡಿವೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾವು ಈ ಕ್ಯಾಸಿನಿ ಗಗನನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿಕೊಟ್ಟಿತ್ತು. ಈ ಸುಂಟರಗಾಳಿ ಅದೆಷ್ಟು ಬಲಯುತವಾಗಿದೆಯೆಂದರೆ ಅದು ಇಡೀ ಶನಿ ಗ್ರಹದ ವಾತಾವರಣದ ತುಂಬೆಲ್ಲ ಅನಿಲಭರಿತ ಧೂಳನ್ನು ಹರಡುತ್ತಿದೆ. ಕ್ಯಾಸಿನಿ ಗಗನನೌಕೆಯಲ್ಲಿದ್ದ ರೇಡಿಯೋ ಮತ್ತು ಪ್ಲಾಸ್ಮಾ ತರಂಗಾಂತರ ಉಪಕರಣಗಳು ಮೊದಲಿಗೆ ಸುಂಟರಗಾಳಿಯನ್ನು ಗಮನಿಸಿದವು. ಕ್ಯಾಸಿನಿ ಗಗನನೌಕೆಯ ಅತಿ ನೇರಳೆ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್ ಎಂಬ ಉಪಕರಣವು ಈ ಸುಂಟರಗಾಳಿಯು ಹಿಂಸಾತ್ಮಕ ರೂಪ ತಳೆದು ಅಮೋನಿಯಾ ಅನಿಲವನ್ನು ಎಲ್ಲೆಡೆ ಹರಡುತ್ತಿದೆ ಎಂದು ದಾಖಲಿಸಿದೆ. ಈ ದೊಡ್ಡ ಸುಂಟರಗಾಳಿಯ ಅಗಲ ಸುಮಾರು 5,000 ಕಿಲೋ ಮೀಟರ್ ಇದೆ. ಈ ಸುಂಟರಗಾಳಿಯಿಂದ ಶನಿ ಗ್ರಹದ ವಾತಾವರಣದ ಗಾಳಿಯ ಚಲನೆಯು ತೀವ್ರತರದಲ್ಲಿ ಮಾರ್ಪಾಟಾಗಿದ್ದು ಅಲ್ಲಿನ ಶಕ್ತಿ ಮತ್ತು ವಸ್ತುಗಳನ್ನು ದೂರ ಪ್ರದೇಶಗಳಿಗೆ ದಿಕ್ಕಾಪಾಲಾಗಿ ಚೆಲ್ಲಾ ಪಿಲ್ಲಿಯಾಗಿಸಿದೆ.



ನಮ್ಮ ಭೂಮಿಯಿಂದ ಸುಮಾರು 51 ಕಿಲೋ ಮೀಟರ್ ವರೆಗೆ ಚಾಚಿರುವ ಸ್ಟ್ರ್ಯಾಟೋಸ್ಪಿಯರ್ ಎಂದು ಕರೆಯಲಾಗುವ ವಾತಾವರಣದ ಗಡಿಯ ಕೆಳ ಹಂತದಲ್ಲಿ ಸಾಮಾನ್ಯವಾಗಿ ವಿಮಾನಯಾನ ಮಾಡುವುದನ್ನು ತಪ್ಪಿಸಿ ಇದರ ಮೇಲ್-ಹಂತದಲ್ಲಿ ಯಾನ ಮಾಡಲಾಗುತ್ತದೆ. ಏಕೆಂದರೆ ಈ ಕೆಳ ಹಂತದಲ್ಲಿ ವಾತಾವರಣದಲ್ಲಿನ ವಾಯು ವೇಗ, ಒತ್ತಡ, ಉಷ್ಣತೆ ಇತ್ಯಾದಿಗಳ ಏರಿಳಿತಗಳು ಹೆಚ್ಚಿರುತ್ತವೆ. ಆದರೆ ಶನಿ ಗ್ರಹದ ಸ್ಟ್ರ್ಯಾಟೋಸ್ಪಿಯರ್ ಮೇಲ್-ಹಂತದ ಎತ್ತರದಲ್ಲಿಯೂ ಕೂಡ ಸುಂಟರಗಾಳಿಯ ಪ್ರವಾಹ ಚಿಮ್ಮುತ್ತಿದೆ ಎನ್ನಲಾಗಿದೆ.

ಶನಿ ಗ್ರಹದ ವಾತಾವರಣ ಮತ್ತು ಉಪಗ್ರಹಗಳು:
ಶನಿ ಗ್ರಹವು ಸೂರ್ಯ ಪರಿವಾರದಲ್ಲಿ ಜ್ಯೂಪಿಟರ್ ನಂತರ ಎರಡನೇ ಅತಿ ದೊಡ್ಡ ಗ್ರಹವೆನಿಸಿದೆ. ಆದರೆ ಸೂರ್ಯನಿಂದ ದೂರವಿರುವ 6ನೇ ಗ್ರಹವಾಗಿದೆ. ಇದು ಭೂಮಿಯಿಂದ ಸುಮಾರು 1,20,000 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಶನಿ ಗ್ರಹದ ತೂಕ ನಮ್ಮ ಭೂಮಿಯ ಒಟ್ಟಾರೆ ತೂಕದ ಮುಕ್ಕಾಲು ಪ್ರಮಾನದ ತೂಕ ಮಾತ್ರವಿದ್ದರೂ ಆಕಾರದಲ್ಲಿ ಭೂಮಿಯ 95 ಪಟ್ಟು ದೊಡ್ಡದಿದೆ. ಶನಿ ಗ್ರಹವು ತನ್ನ ಸುತ್ತ ಆವರಿಸಿರುವ ಒಂಬತ್ತು ಬಳೆಗಳನ್ನು ಹೊಂದಿದ್ದು, ಈ ಬಳೆಗಳು ಮಂಜುಗಡ್ಡೆಯ ಕಣಗಳು, ಬಂಡೆಯ ಚೂರುಗಳು ಮತ್ತು ಧೂಳಿನಿಂದ ಮಾಡಲ್ಪಟ್ಟಿವೆ. ಶನಿ ಗ್ರಹವು ಸುಮಾರು ನಮ್ಮ ಚಂದ್ರನಂತಹ 62 ಉಪಗ್ರಹಗಳನ್ನು ಹೊಂದಿದ್ದು, ಅದರಲ್ಲಿ ಟೈಟಾನ್ ಎಂಬ ಉಪಗ್ರಹವೇ ದೊಡ್ಡದು.



ಗಗನನೌಕೆಗಳಿಂದ ಶನಿ ಗ್ರಹ ಸರ್ವೇಕ್ಷಣೆ:
ಶನಿ ಗ್ರಹದ ವೀಕ್ಷಣೆಯನ್ನು ಮೊದಲು ಬರಿಗಣ್ಣಿಂದ ನೋಡಲಾಗುತ್ತಿತ್ತು. 17ನೇ ಶತಮಾನದಲ್ಲಿ ಬಲು ಪರಿಣಾಮಕಾರಿಯಾದ ದೂರದರ್ಶಕಗಳನ್ನು ಅಭಿವೃದ್ಧಿಪಡಿಸಿ ವೀಕ್ಷಿಸಲಾಗುತ್ತಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ ಪಯನಿಯರ್, ವಾಯೇಜರ್ ನೌಕೆಗಳನ್ನು ಕಳುಹಿಸಲಾಯಿತು. 2004ರಲ್ಲಿ ಕ್ಯಾಸಿನಿ-ಹ್ಯೂಜೆನ್ಸ್ ಎಂಬ ಗಗನನೌಕೆಗಳು ಶನಿ ಗ್ರಹ ಪ್ರಯಾಣ ಮಾಡಿ ಆ ಗ್ರಹದ ಸುತ್ತು ಹಾಕಿ, ಗ್ರಹ ಪ್ರದೇಶಕ್ಕಿಳಿದು ಪೋಟೋ ತೆಗೆದುಕೊಂಡವು ಹಾಗೆಯೇ ಅದರ ಉಪಗ್ರಹ ಟೈಟಾನ್ ಮೇಲೆ ಓಡಾಡಿ ಸರ್ವೇಕ್ಷಣೆ ನಡೆಸಿತು. ಟೈಟಾನ್ ನಲ್ಲಿ ದೊಡ್ಡ ಸರೋವರಗಳಿರುವುದು, ಬೆಟ್ಟ ಗುಡ್ಡಗಳು, ದ್ವೀಪಗಳಿರುವ ಚಿತ್ರಗಳನ್ನು ನಮಗೆ ನೀಡಿದೆ.
*******

Wednesday, June 22, 2011

ಸೋವಿಯತ್ ಒಕ್ಕೂಟದ ಐತಿಹಾಸಿಕ ಗಗನಯಾನ: ಯೂರಿ ಗಗಾರಿನ್ ಗಗನಯಾನಕ್ಕೆ 50 ವರ್ಷಗಳ ಸಂಭ್ರಮಾಚರಣೆ




1961ರ ಏಪ್ರಿಲ್ 12 ರಂದು ಇಡೀ ವಿಶ್ವದ ಜನತೆಯನ್ನು ದಿಘ್ಮೂಡರನ್ನಾಗಿಸಿದಂತ ಘಟನೆಗೆ ಮನುಕುಲ ಸಾಕ್ಷಿಯಾಯಿತು. ಮರಗೆಲಸಗಾರನ ಮಗನಾಗಿದ್ದ ಗಗನಯಾನಿ ಯೂರಿ ಗಗಾರಿನ್ ರನ್ನು ಹೊತ್ತ ವೊಸ್ತಕ್ ಎಂಬ ಗಗನನೌಕೆಯು ಕಜಕ್ಸ್ತಾನದ ನಿಲ್ದಾಣದಿಂದ ರಾಕೆಟ್ ವೇಗದಲ್ಲಿ ಗಗನಕ್ಕೆ ಹಾರಿ ಭೂಮಿಯ ಸುತ್ತ 79 ನಿಮಿಷಗಳ ಕಾಲ ಪ್ರದಕ್ಷಿಣೆ ಹಾಕಿ ವಾಪಸಾಯಿತು. ಆದರೆ ವಾಪಸಾಗುವಾಗ ಕೆಲವು ತಾಂತ್ರಿಕ ತೊಂದರೆಗಳಿಂದ ಎಲ್ಲರೂ ಆತಂಕಗೊಂಡ ಕ್ಷಣವದು. ಅಂತಿಮವಾಗಿ ಗಗಾರಿನ್ ವೋಲ್ಗಾ ನದಿಯ ಬಳಿ ಪ್ಯಾರಾಚೂಟ್ನಿಂದ ಜಿಗಿದು ಬಂದರು. ಅಷ್ಟರಲ್ಲಿಯೇ ಯೂರಿ ಗಗಾರಿನ್ ಸೋವಿಯತ್ ಒಕ್ಕೂಟದ ರಾಷ್ಟ್ರೀಯ ಹೀರೋ ಮಾತ್ರ ಆಗಿದ್ದಲ್ಲದೇ ಇಡೀ ವಿಶ್ವದ ಜನತೆಯ ನಾಲಗೆಯ ಮೇಲೆ ಅವರ ಹೆಸರು ಕುಣಿದಾಡಿತು.



ಮನುಕುಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮನುಷ್ಯ ಗಗನಯಾನ ಮಾಡಿದ್ದು ವಿಶ್ವದ ತುಂಬೆಲ್ಲ ರೋಮಾಂಚನವುಂಟು ಮಾಡಿದರೆ ಸಮಾಜವಾದಿ ಸೋವಿಯತ್ ಒಕ್ಕೂಟದ ಕಡುವೈರಿಯಾಗಿದ್ದ ಸಾಮ್ರಾಜ್ಯಶಾಹಿ ಅಮೇರಿಕಾಗೆ ಒಳಗೊಳಗೆ ನಡುಕ ಉಂಟಾಗಿತ್ತು. ಏಕೆಂದರೆ ಗಗನಯಾನ ತಂತ್ರಜ್ಞಾನದಲ್ಲಿ ಈ ಘಟನೆ ಸೋವಿಯತ್ ರಷ್ಯಾ ಒಕ್ಕೂಟದ ಮೇಲುಗೈ ಹೊಂದಿರುವುದಕ್ಕೆ ಸಾಕ್ಷಿಯಾಗಿತ್ತು. ಇದಾದ ನಾಲ್ಕು ತಿಂಗಳಿಗೆ ಮತ್ತೆ ಘೆರ್ಮನ್ ಟೈಟವ್ ಎಂಬ ಗಗನಯಾನಿಯನ್ನು ಹೊತ್ತು ಮತ್ತೊಂದು ಗಗನನೌಕೆ ಭೂಮಿಯನ್ನು 25 ಘಂಟೆ ಕಾಲ 17 ಬಾರಿ ಪ್ರದಕ್ಷಿಣೆ ಹಾಕಿತು. ಸೋವಿಯತ್ ಒಕ್ಕೂಟದ ರಾಕೆಟ್ ತಂತ್ರಜ್ಞಾನದ ಜನಕ ಎಂದೇ ಹೆಸರಾಗಿರುವ ಸೇಗರ್ ಕೊರೊಲ್ಯೊವ್ ರವರು ಈ ತಂತ್ರಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಈ ಘಟನೆ 1917ರ ಅಕ್ಟೋಬರ್ ಕ್ರಾಂತಿಯಂತೆಯೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸೋವಿಯತ್ ಒಕ್ಕೂಟ ಹೊಂದಿರುವ ಕ್ರಾಂತಿಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ.


ಇದರಿಂದ ವಿಚಲಿತಗೊಂಡ ಅಮೇರಿಕಾ 1961ರ ಮೇ ತಿಂಗಳಲ್ಲಿ ಒಂದು ಗಗನನೌಕೆಯನ್ನು ಹಾರಿಬಿಟ್ಟಿತಾದರೂ ಅದು ಕೇವಲ 15 ನಿಮಿಷ ಮಾತ್ರವೇ ಹಾರಾಡಿತು. 1962ರಲ್ಲಿಯೂ ಮತ್ತೊಂದು ಅಮೇರಿಕಾದ ಗಗನನೌಕೆ ಕೇವಲ 3 ಪ್ರದಕ್ಷಿಣೆ ಹಾಕಿ ಹಿಂದಿರುಗಿತು. ಯೂರಿಗಗಾರಿನ್ ಗಗನಯಾನ ಮಾಡಿದ್ದು ಅಮೇರಿಕಾದ ಮೇಲೆ ಅದೆಷ್ಟು ಒತ್ತಡ ಉಂಟು ಮಾಡಿತೆಂದರೆ, ಗಗಾರಿನ್ ಯಾನದ ಒಂದು ತಿಂಗಳ ನಂತರ ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಒಂದು ಅಧಿಕೃತ ಘೋಷಣೆ ಹೊರಡಿಸಿ ಆ ದಶಕದೊಳಗೆ ಅಮೇರಿಕಾ ಚಂದ್ರನ ಬಳಿಗೆ ಮಾನವನನ್ನು ಒತ್ತೊಯ್ಯಲಿದೆ ಎಂದರು. ಕೊನೆಗೆ ಅದು ನನಸಾಗಿದ್ದು 1969ರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಎಡ್ವಿನ್ ಚಂದ್ರ ಗ್ರಹದಲ್ಲಿ ಪಾದಾರ್ಪಣೆ ಮಾಡಿದಾಗಲೇ.

ಅಮೇರಿಕಾ ಕೊಲಂಬಿಯಾ, ಛಾಲೆಂಜರ್, ಡಿಸ್ಕವರಿ, ಅಟ್ಲಾಂಟಿಸ್, ಮತ್ತು ಎಂಡೇವರ್ ಎಂಬ ಗಗನನೌಕೆಗಳನ್ನು ಒಂದಾದ ನಂತರ ಮತ್ತೊಂದರಂತೆ ಕಳುಹಿಸಿತು. ಸೋವಿಯತ್ ಒಕ್ಕೂಟ ಛಿದ್ರಗೊಂಡ ನಂತರ ಅಮೇರಿಕಾ ಗಗನಯಾನ ತಂತ್ರಜ್ಞಾನದಲ್ಲಿ ಮೇಲುಗೈ ಸಾಧಿಸಿತು. ಇತ್ತೀಚೆಗೆ 16 ರಾಷ್ಟ್ರಗಳು ಒಗ್ಗೂಡಿ ಗಗನದಲ್ಲಿ ನಿರ್ಮಿಸಿರುವ ಅಂತರಾಷ್ಟ್ರೀಯ ಗಗನ ನಿಲ್ದಾಣ, ಅಮೇರಿಕಾ ಮತ್ತು ಯೂರೋಪಿಯನ್ ಒಕ್ಕೂಟದ ಹಬಲ್ ಗಗನ ದೂರದರ್ಶಕ ಮತ್ತು ಚೀನಾ ಮತ್ತು ಭಾರತ ದೇಶಗಳು ಚಂದ್ರಯಾನದಂಥಹ ಯೋಜನೆಗಳನ್ನು ಹಮ್ಮಿಕೊಂಡಿರುವುದು ಗಗನ ಶೋಧನೆಯ ಹೆಜ್ಜೆಗಳನ್ನು ತೀವ್ರಗೊಳಿಸಿವೆ.


ಸೋವಿಯತ್ ಒಕ್ಕೂಟದ ಪತನದ ನಂತರ ಹಿಂದಿನ ಅವಧಿಯಲ್ಲಿ ಆ ದೇಶ ಅಭಿವೃದ್ಧಿ ಪಡಿಸಿದ್ದ ಇಂತಹ ಹಲವಾರು ಅತ್ಯದ್ಭುತ ತಂತ್ರಜ್ಞಾನಗಳನ್ನು ಜೋಪಾನದಿಂದ ಕಾಪಾಡಿ ಮತ್ತಷ್ಟು ಅಭಿವೃದ್ಧಿಪಡಿಸಿ ಮುಂದೊಯ್ಯಲಾಗದೇ ಅಲ್ಲಿನ ಸಕರ್ಾರಗಳು ಅವನ್ನು ಹಾಳು ಮಾಡಿವೆಯೆಂದು ಹಲವಾರು ವಿಜ್ಞಾನಿಗಳು ಇಂದಿಗೂ ದೂರುತ್ತಾರೆ.

ಯೂರಿ ಗಗಾರಿನ್ ಆಕಾಶಯಾನ ಮಾಡಿದ ದಿನವೆಂದು ಪ್ರತಿ ವರ್ಷ ಏಪ್ರಿಲ್ 12ರಂದು ರಷ್ಯಾದಲ್ಲಿ "ಕಾಸ್ಮೋನಾಟ್ ದಿನ" ಎಂದು ಆಚರಿಸುತ್ತಿದ್ದರು. ಈ ವರ್ಷದಿಂದ ವಿಶ್ವಸಂಸ್ಥೆಯು ಈ ದಿನವನ್ನು "ಅಂತರಾಷ್ಟ್ರೀಯ ಮಾನವ ಆಕಾಶಯಾನದ ದಿನ" ಎಂದು ಘೋಷಿಸಿದೆ.
**********

Thursday, December 23, 2010

ವಸ್ತುವಿನ ತದ್ರೂಪು ಪ್ರತಿ-ವಸ್ತುವನ್ನು ಹಿಡಿದಿಡುವಲ್ಲಿ ವಿಜ್ಞಾನಿಗಳ ಯಶಸ್ಸು



ಭೂಮಿಯಲ್ಲಿ ಒಂದೇ ತರಹದ 7 ಜನ ಇರುತ್ತಾರೆಂದು ಹಲವು ವೇಳೆ ಕೆಲವರು ಪುಂಗಿ ಬಿಡುವುದನ್ನು ನಾವು ಕೇಳಿದ್ದೇವೆ. ಆದರೆ ಯಾವುದೇ ವಸ್ತುವಿನ ಅತ್ಯಂತ ಸಣ್ಣಾತಿಸಣ್ಣ ಕಣವಾದ ಪರಮಾಣುವಿನ ಪ್ರತಿರೂಪ ಅಂದರೆ ಪ್ರತಿ-ಪರಮಾಣುವನ್ನು ವಿಜ್ಞಾನಿಗಳು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭೌತಶಾಸ್ತ್ರದಲ್ಲಿ ಮೂಲಕಣಗಳ ಸ್ವರೂಪ ಮತ್ತು ಅದರ ರಚನೆಯ ಮಹಾನ್ ರಹಸ್ಯಗಳನ್ನು ಭೇಧಿಸುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

1931ರಲ್ಲಿ ಬ್ರಿಟಿಷ್ ಭೌತಶಾಸ್ತ್ರಜ್ಞ ಪಾಲ್ ಡೈರಕ್ ಎಂಬುವನು ಮೊದಲ ಬಾರಿಗೆ ಈ ಸಿದ್ದಾಂತವನ್ನು ರೂಪಿಸಿದ. ಅದರಂತೆ ಒಂದು ಶಕ್ತಿಯು ವಸ್ತುವಾಗಿ ಪರಿವರ್ತನೆಗೊಂಡಾಗ ಅದರಲ್ಲಿ ಉತ್ಪಾದನೆಯಾಗುವುದು: ಒಂದು ಕಣ ಮತ್ತು ಆ ಕಣದ ಕನ್ನಡಿ ಬಿಂಬ. ಈ ಕಣದ ಕನ್ನಡಿ ಬಿಂಬವನ್ನು ಪ್ರತಿ-ಕಣ ಎಂದು ಕರೆಯಲಾಗುತ್ತದೆ. ಈ ಪ್ರತಿ-ಕಣವು ವಿರುದ್ದ ವಿದ್ಯುತ್ ಋಣವನ್ನು ಹೊಂದಿರುತ್ತದೆ. ನಮಗೆ ತಿಳಿದಿರುವಂತೆ ವಸ್ತುವೊಂದರ ಸಣ್ಣಾತಿಸಣ್ಣ ಕಣವಾದ ಪರಮಾಣುವೊಂದರಲ್ಲಿ ಮೂಲತ: ಒಂದು ಪ್ರೋಟಾನ್ ಮತ್ತು ನ್ಯೂಟ್ರಾನು ಇದ್ದು ಇವೆರಡರ ಸುತ್ತಲೂ ಇಲೆಕ್ಟ್ರಾನುಗಳು ಸುತ್ತು ಹಾಕುತ್ತಿರುತ್ತವೆ. ಇಲೆಕ್ಟ್ರಾನ್ ಪ್ರತಿವಸ್ತುವನ್ನು ಅಂದರೆ ಕನ್ನಡಿ ಬಿಂಬವನ್ನು ಪಾಸಿಟ್ರಾನ್ ಎಂದು ಕರೆಯುತ್ತಾರೆ. ಅದೇ ರೀತಿ ಪ್ರೋಟಾನ್-ಪ್ರತಿಪ್ರೋಟಾನ್, ಜಲಜನಕ-ಪ್ರತಿಜಲಜನಕ, ಇತ್ಯಾದಿ. ಕಣ ಮತ್ತು ಅದರ ಕನ್ನಡಿ ಬಿಂಬವಾದ ಪ್ರತಿ-ಕಣವು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಅವುಗಳಿಂದ ಹೆಚ್ಚಿನ ಶಕ್ತಿ ಬಿಡುಗಡೆ ಹೊಂದಿ ಅವು ನಾಶಗೊಳ್ಳುತ್ತವೆ.

ವಿಶ್ವ ಸೃಷ್ಟಿಯ ರಹಸ್ಯದ ಶೋಧನೆ:
ಭೌತಶಾಸ್ತ್ರದ ಪರಮಾಣುಗಳ ಸ್ವರೂಪವನ್ನು ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳಿಗೆ ರಹಸ್ಯವಾಗಿಯೇ ಉಳಿದಿರುವ ವಿಷಯವೆಂದರೆ ವಿಶ್ವದಲ್ಲಿ ವಸ್ತು ಇರುವಂತೆಯೇ ಅದರ ಪ್ರತಿ-ವಸ್ತುಗಳು ಅಸ್ತಿತ್ವದಲ್ಲಿವೆಯೇ ಎಂಬುದು. ಅವು ಅಸ್ತಿತ್ವದಲ್ಲಿದ್ದರೆ ಎಲ್ಲಿವೆ? ಅವುಗಳನ್ನು ಪ್ರಯೋಗಗಳ ಮೂಲಕ ಅಸ್ತಿತ್ವಕ್ಕೆ ತರಬಹುದೇ? ಅವುಗಳನ್ನು ಅಸ್ತಿತ್ವಕ್ಕೆ ತಂದ ಮೇಲೆ ಅವುಗಳ ಸ್ವಭಾವ ಏನು ಇತ್ಯಾದಿ ಕುರಿತು ಹಲವು ಪ್ರಯೋಗಗಳು ನಡೆಯುತ್ತಲೇ ಇವೆ. ಇದುವರೆಗೂ ಪ್ರಯೋಗಗಳ ಮೂಲಕ ಜಲಜನಕ ಎಂಬ ಮೂಲವಸ್ತುವಿನ ಪ್ರತಿ-ಪರಮಾಣುವನ್ನು ಉತ್ಪಾದಿಸಲಾಗಿತ್ತು. ಆದರೆ ಅದನ್ನು ಉತ್ಪಾದಿಸಿದ ಕ್ಷಣಾರ್ಧದಲ್ಲಿ ಅಲ್ಲ ಅಲ್ಲ, ಸೆಕೆಂಡಿನ ಲಕ್ಷದ ಒಂದು ಕಾಲ ಮಾತ್ರ! ಅದು ವಸ್ತುವಿನ ಜೊತೆ ಡಿಕ್ಕಿ ಹೊಡೆದು ನಾಶಗೊಳ್ಳುತ್ತಿತ್ತು! ಇದರಿಂದ ಅದನ್ನು ಅಳೆಯುವುದಾಗಲಿ ಅಥವಾ ಅದರ ರಚನೆಯನ್ನು ಅಧ್ಯಯನ ಮಾಡುವುದಾಗಲಿ ಅಸಾಧ್ಯವಾಗಿತ್ತು.



ಆದರೆ, ಯೂರೋಪ್ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್ಎನ್)ಯು ನಡೆಸುತ್ತಿರುವ ಹಲವಾರು ಪ್ರಯೋಗಗಳಲ್ಲಿ ಸಾವಿರಾರು ಪ್ರತಿ-ಜಲಜನಕ ಅಣುಗಳನ್ನು ತಯಾರಿಸಿದೆಯಾದರೂ ಅವುಗಳಲ್ಲಿ ಕೇವಲ 38 ಪ್ರತಿ-ಜಲಜನಕ ಅಣುಗಳನ್ನು ಮಾತ್ರವೇ ಹಿಡಿದಿಡಲು ಅದೂ ಕೂಡ ಸೆಕೆಂಡಿನ ಹತ್ತನೇ ಒಂದು ಕಾಲ ಮಾತ್ರ ಹಿಡಿದಿಡಿದು ಅಧ್ಯಯನ ಮಾಡಲು ಸಾಧ್ಯವಾಗಿದೆ.

ಈ ವಿಶ್ವ ಅಥವಾ ಬ್ರಹ್ಮಾಂಡವನ್ನು ದೇವರು ಹೇಗೆ ಸೃಷ್ಟಿ ಮಾಡಿದ ಎಂದು ಅನಾದಿ ಕಾಲದಲ್ಲಿ ತಮ್ಮ ಧರ್ಮಗ್ರಂಥಗಳಲ್ಲಿ ಬರೆದು ಹೋದ ತಮ್ಮ ಹಿರಿಯರ ವಿಚಾರಗಳಿಂದಲೇ ಹಿಂದೂ ಧರ್ಮದ ಆದಿಯಾಗಿ ಕ್ರಿಶ್ಚಿಯನ್, ಇಸ್ಲಾಂ, ಇತ್ಯಾದಿ ಎಲ್ಲ ಧರ್ಮಗಳು ಅರ್ಥೈಸುತ್ತವೆ. ಆದರೆ ಧರ್ಮಗಳು ನೀಡುವ ವಿವರಣೆಗೂ ಸಾಕ್ಷ್ಯಗಳನ್ನುಳ್ಳ ವಾಸ್ತವತೆಗೂ ಯಾವುದೇ ನಂಟಿರುವುದಿಲ್ಲ. ಇಂದಿನ ವಿಜ್ಞಾನ ಈ ವಿಶ್ವದ ಆರಂಭ ಹೇಗಾಯಿತು? ಅಥವಾ ಅನಾದಿ ಕಾಲದಲ್ಲಿ ಹಲವು ಲಕ್ಷಾಂತರ ವರ್ಷಗಳ ಹಿಂದೆ ಈ ವಿಶ್ವ ಹೇಗಿತ್ತು? ಈ ವಿಶ್ವ ಹೇಗೆ ಬದಲಾಗುತ್ತಾ ವಿಕಸನಗೊಳ್ಳುತ್ತಾ ಹೋಗುತ್ತಿದೆ? ಈ ವಿಶ್ವದ ಸ್ವರೂಪಕ್ಕೆ ಕಾರಣವಾಗಿರುವ ಮೂಲ ಕಣಗಳ ಗುಣಸ್ವಭಾವಗಳೇನು? ಇತ್ಯಾದಿ ಪ್ರಶ್ನೆಗಳಿಗೆ ನಮ್ಮ ವಿಜ್ಞಾನಿಗಳು ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ, ಹಲವು ಪರೀಕ್ಷೆಗಳ ಮೂಲಕ ವಿವರಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.

ದೊಡ್ಡ ಹ್ಯಾಡ್ರನ್ ಡಿಕ್ಕಿಕಾರಕ (ಎಲ್.ಹೆಚ್.ಸಿ) ಪ್ರಯೋಗ:

ಯೂರೋಪ್ ಪರಮಾಣು ಸಂಶೋಧನಾ ಸಂಸ್ಥೆ (ಸಿಇಆರ್ಎನ್)ಯು 100 ಕ್ಕೂ ಹೆಚ್ಚು ದೇಶಗಳ 10,000ಕ್ಕೂ ಹೆಚ್ಚು ವಿಜ್ಞಾನಿಗಳು ಒಡಗೂಡಿ ನಡೆಸುತ್ತಿರುವ ಮತ್ತೊಂದು ದೊಡ್ಡ ಹ್ಯಾಡ್ರನ್ ಡಿಕ್ಕಿಕಾರಕ (ಎಲ್.ಹೆಚ್.ಸಿ) ಪ್ರಯೋಗವು ಈ ವಿಶ್ವ ಹೇಗೆ ರೂಪುಗೊಂಡಿದೆ ಮತ್ತು ಮೂಲಕಣಗಳು ಯಾವುದರಿಂದ ಮಾಡಲ್ಪಟ್ಟಿವೆ ಎಂದು ಕಂಡುಹಿಡಿಯುವುದಾಗಿದೆ. ಮೂಲಕಣಗಳಿಗೆ ಅತಿ ಹೆಚ್ಚು ಶಕ್ತಿ ನೀಡಿದಾಗ ಅವು ಹೇಗೆ ವರ್ತಿಸುತ್ತವೆ ಎಂದು ಅಧ್ಯಯನ ನಡೆಸಲಾಗುತ್ತಿದೆ.

***********

ಪೆನ್ಸಿಲ್ ನಲ್ಲಿರುವ ಕಪ್ಪು ಸೀಸದ ಕಡ್ಡಿ ಉಕ್ಕಿಗಿಂತ ಬಲಿಷ್ಟ!


ಪೆನ್ಸಿಲ್ ನಲ್ಲಿ ನಮಗೆ ಬರೆಯಲು ಸಾಧ್ಯವಾಗುವುದು ಅದರಲ್ಲಿರುವ ಗ್ರಾಫೈಟ್ ಎಂದು ಕರೆಯಲಾಗುವ ಕಪ್ಪು ಸೀಸದ ಕಡ್ಡಿಯಿಂದ. ಗ್ರಾಫೈಟ್ ನ್ನು ಅತಿ ಸಣ್ಣದಾಗಿ ಎಳೆ ಎಳೆಯಂತೆ ಕತ್ತರಿಸುತ್ತಾ ಹೋದಂತೆ, ಅದನ್ನು ಪರಮಾಣುವಿಗಿಂತ ಅತಿ ಸಣ್ಣ ಎಳೆಯಂತೆ ಬೇರ್ಪಡಿಸಿದಾಗ ಈ ಸಣ್ಣ ಹಾಳೆಗೆ ವಿಚಿತ್ರ ಗುಣಲಕ್ಷಣಗಳು ಮೂಡಿಬರುತ್ತವೆ. ಈ ಹಾಳೆಯನ್ನು ಗ್ರಾಫೀನ್ ಎಂದು ಕರೆಯುತ್ತಾರೆ. ಇದು ವಿಶ್ವದ ಮೊದಲ 2 ಆಯಾಮದ ವಸ್ತುವೂ ಆಗಿದೆ. ಈ ಗ್ರಾಫೈಟ್ ಹಾಳೆಯಲ್ಲಿ ಕೇವಲ ಇಂಗಾಲದ ಪರಮಾಣುಗಳು ಮಾತ್ರವಿರುತ್ತವೆ.

ಈ ರೀತಿ ಹಾಳೆಗಳಂತೆ ಗ್ರಾಫೈಟ್ ನ್ನು ಬೇರ್ಪಡಿಸುವ ವಿಧಾನವನ್ನು ಕಂಡುಹಿಡಿದ ಆಂಡ್ರೆ ಗ್ರೀಮ್ ಮತ್ತು ನೊವಸೆಲೆವ್ ಎಂಬ ವಿಜ್ಞಾನಿಗಳಿಗೆ ಈ ವರ್ಷದ ನೊಬೆಲ್ ಪಾರಿತೋಷಕವು ಭೌತಶಾಸ್ತ್ರ ಸಂಶೋಧನೆ ವಿಭಾಗದಲ್ಲಿ ಲಭಿಸಿದೆ. ಗ್ರಾಫೈಟ್ ಮತ್ತು ಇತರೆ ವಸ್ತುಗಳನ್ನು ಅವುಗಳ ಮೂಲವಸ್ತುಗಳ ರೂಪದಲ್ಲಿ, ಬೇರೆ ಬೇರೆ ವಿಧಾನಗಳಿಂದ ತೆಳುವಾಗಿ ಬೇರ್ಪಡಿಸಿ ಅವುಗಳ ಗುಣಲಕ್ಷಣಗಳನ್ನು ನಮ್ಮ ದೇಶದ ಪ್ರೊ. ಸಿ.ಎನ್.ಆರ್ ರಾವ್ ಒಳಗೊಂಡಂತೆ ಇತರೆ ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.

ಪೆನ್ಸಿಲ್ ನಿಂದ ನಾವು ಬರೆಯಲಾರಂಭಿಸಿದರೆ ಸಾಕು ನೋಡನೋಡುತ್ತಿದ್ದಂತೆ ನಮಗೆ ಗ್ರಾಫೈಟ್ ಕಪ್ಪು ಪುಡಿ ಉದುರಲಾರಂಭಿಸುತ್ತದೆ. ಇಂಥಹ ಅತಿ ಸಣ್ಣ ಕಣಗಳನ್ನು ಮತ್ತಷ್ಟು ಸಣ್ಣ ಹಾಳೆಗಳಂತೆ ಬೇರ್ಪಡಿಸಿ ಅಂತಿಮವಾಗಿ ಪಡೆಯುವುದೇ ಗ್ರಾಫೀನ್.
ಗ್ರಾಫೈಟ್ ನಿಂದ ಸಣ್ಣಾತಿಸಣ್ಣ ತೆಳು ಹಾಳೆಗಳಂತೆ ಬೇರ್ಪಡೆಯಾದ ಗ್ರಾಫೀನ್, ಪಾರದರ್ಶಕವಾಗಿ ಬೆಳಕನ್ನು ತನ್ಮೂಲಕ ಹಾದುಹೋಗಲು ಬಿಡುತ್ತದೆ, ಆದರೆ ನೀರು ಮತ್ತು ಗಾಳಿಗೆ ತಡೆಯೊಡ್ಡುತ್ತದೆ. ಹೀಲಿಯಂನಷ್ಟು ಅತಿ ಸಣ್ಣ ಅಣುವೂ ಕೂಡ ಇದನ್ನು ತೂರಿ ಹೋಗಲಾರದು. ರಬ್ಬರ್ ಹಿಗ್ಗಿ ಕುಗ್ಗುವಂತೆ ಇದನ್ನೂ ಸಹ ಜಗ್ಗಾಡಬಹುದು. ಅಲ್ಲದೆ ನೂರಾರು ವಿಶಿಷ್ಟ ಉಪಯುಕ್ತ ಗುಣಲಕ್ಷಣಗಳ ವೈವಿಧ್ಯತೆಯನ್ನೇ ಹೊಂದಿರುವ ಈ ಗ್ರಾಫೀನ್, ತಾಮ್ರದಂತೆ ತನ್ಮೂಲಕ ವಿದ್ಯುತ್ ನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಲ್ಲುದು. ಇದು ಈವರೆಗೆ ಬಳಕೆಯಲ್ಲಿರುವ ವಾಹಕಗಳೆಲ್ಲೆಲ್ಲ ಅತ್ಯುತ್ತಮ ವಿದ್ಯುತ್ ವಾಹಕವೂ ಹೌದು. ಮತ್ತೂ ವಿಚಿತ್ರವೆಂದರೆ ಇದು ವಜ್ರದಂತೆ ಕಠಿಣವೂ ಹೌದು. ಉಕ್ಕಿಗಿಂತ ನೂರು ಪಟ್ಟು ಬಲಿಷ್ಟ.

ಗ್ರಾಫೀನ್ ನ್ನು ಕಂಪ್ಯೂಟರ್ ಚಿಪ್ ಗಳಲ್ಲಿ , ಸೋಲಾರ್ ಕೋಶಗಳಲ್ಲಿ, ಟ್ರಾನ್ಸಿಸ್ಟರ್ ಗಳು, ಹಗುರ ವಿಮಾನ, ವಾಹನಗಳ ಇಂಜಿನ್, ಬುಲೆಟ್ ಗಳು, ಇತ್ಯಾದಿಗಳಲ್ಲಿ ಬಳಸಬಹುದು. ಮುಂದಿನ ವರ್ಷಗಳಲ್ಲಿ ಈ ಅದ್ಭುತ ವಸ್ತು ಹತ್ತಲವು ಉಪಯುಕ್ತತೆಗಳಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
*******

Thursday, June 10, 2010

ತೈಲ ಸೋರಿಕೆ ಕುರಿತ ಕಾರ್ಟೂನುಗಳು

ಪರಿಸರವಾದಿಗಳು ಮತ್ತು ತೈಲ ಕಂಪನಿಗಳು


ಒಬಾಮ ನ ಆರಂಭದ ಪ್ರತಿಕ್ರಿಯೆ




ಕೃಪೆ: http://politicalhumor.about.com/od/politicalcartoons/ig/Oil-Spill-Cartoons/

ಅಮೇರಿಕಾದ ಕಂಪನಿಗಳ ದುಷ್ಕೃತ್ಯ ಮತ್ತು ಪರಿಸರ ದುರಂತ




ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳು ವಿಶ್ವದಾದ್ಯಂತ ನಿಸರ್ಗ ಸಂಪತ್ತನ್ನು ಕೊಳ್ಳೆಹೊಡೆಯುತ್ತಾ ಉಂಟುಮಾಡುತ್ತಿರುವ ಪರಿಸರ ದುರ್ಘಟನೆಗಳಿಗೆ ಲೆಕ್ಕವೇ ಇಲ್ಲ. ಅದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಇತ್ತೀಚೆಗೆ ಅಮೇರಿಕಾದಲ್ಲಿ ಸಂಭವಿಸಿರುವ ಅತಿ ದೊಡ್ಡ ತೈಲ ದುರಂತ. ಮೆಕ್ಸಿಕೋ ಕೊಲ್ಲಿ ಪ್ರದೇಶದಲ್ಲಿ ಸಮುದ್ರ ಗರ್ಭದೊಳಗೆ ಸ್ಥಾಪಿಸಲಾಗಿದ್ದ ಪೆಟ್ರೋಲಿಯಂ ಬಾವಿಯು ಸ್ಫೋಟಗೊಂಡು ಭಾರೀ ಪರಿಸರ ನಷ್ಟ ಸಂಭವಿಸಿದೆ. ಈ ಪೆಟ್ರೋಲಿಯಂ ಬಾವಿಯು ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಎಂಬ ದೈತ್ಯ ಕಂಪನಿಯ ಒಡೆತನಕ್ಕೆ ಸೇರಿದ್ದು, ಇದಕ್ಕೆ ಅವಶ್ಯವಿರುವ ಉಪಕರಣಗಳನ್ನು ಸರಬರಾಜು ಮಾಡಿದ್ದು ಹಲ್ಲಿಬರ್ಟನ್ ಎಂಬ ಮತ್ತೊಂದು ದೈತ್ಯ ಕಂಪನಿ. ಏಪ್ರಿಲ್ 20ರಂದು ಸಂಭವಿಸಿದ ಈ ದುರಂತದಲ್ಲಿ, ಎಣ್ಣೆ ಕೊಳವೆಗಳು ಸ್ಫೋಟಗೊಂಡು ಅಲ್ಲಿದ್ದ 126 ಮಂದಿ ಕೆಲಸಗಾರರಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸಾಗರ ಗರ್ಭದೊಳಗಿಂದ ಮೇಲ್ಮೈವರೆಗೂ ಸಂಪರ್ಕಿಸಲಾಗಿದ್ದ ಕೊಳವೆ ಮತ್ತು ಮೇಲ್ಮೈ ಮೇಲಿದ್ದ ಪ್ಲಾಟ್ಫಾರಂ ಎಲ್ಲವೂ ಸಮುದ್ರದೊಳಕ್ಕೆ ಸುಮಾರು 1.5 ಕಿ.ಮೀ ಆಳಕ್ಕೆ ಮುರಿದು ಬಿದ್ದಿವೆ. ಇದರಿಂದಾಗಿ ಪ್ರತಿ ದಿನ 8.0 ಲಕ್ಷ ಲೀಟರಿಗೂ ಹೆಚ್ಚು ಪೆಟ್ರೋಲಿಯಂ ಸಾಗರದೊಳಕ್ಕೆ ಪೆಟ್ರೋಲಿಯಂ ಬಾವಿಯಿಂದ ಚಿಮ್ಮುತ್ತಿದೆ. ಇದನ್ನು ತಡೆಗಟ್ಟುವ ಎಲ್ಲ ಕಾರ್ಯಗಳೂ ಇದುವರೆಗೂ ವಿಫಲವಾಗಿವೆ.




ಹೀಗೆ ಸಾಗರದೊಳಕ್ಕೆ ಚಿಮ್ಮುತ್ತಿರುವ ಪೆಟ್ರೋಲಿಯಮ್ನ್ನು ಮತ್ತೊಂದು ದೊಡ್ಡ ಬಾವಿ ಕೊರೆದು ಅದಕ್ಕೆ ತಿರುಗಿಸುವ ಕಾರ್ಯ ಜರುಗುತ್ತಿದ್ದು ಇದು ಪೂರ್ಣಗೊಳ್ಳಲು ಕನಿಷ್ಟ ಪಕ್ಷ 3 ತಿಂಗಳು ಬೇಕಾಗುತ್ತದೆ. ಅಷ್ಟೊಂದು ಸಾಗರದಾಳದಲ್ಲಿ ಬಾವಿ ಕೊರೆಯುವ ಕೆಲಸವನ್ನು ಕೇವಲ ರೋಬೋಟ್ ಚಾಲಿತ ಯಂತ್ರಗಳು ಮಾತ್ರವೇ ಮಾಡಬಹುದಾಗಿದೆ. ಪೆಟ್ರೋಲಿಯಂ ಸೋರಿಕೆಯಿಂದ ಮಲಿನಗೊಳ್ಳುತ್ತಿರುವ ಸಾಗರದಿಂದ ಲೂಸಿಯಾನ, ಅಲಬಾಮಾ ಮತ್ತು ಪ್ಲೋರಿಡಾದಂಥಹ ರಾಜ್ಯಗಳ ತೀರಪ್ರದೇಶಗಳು ಮತ್ತು ಜೀವ ವೈವಿಧ್ಯವು ಸಂಕಷ್ಟಕ್ಕೆ ಸಿಲುಕಿವೆ. ಈ ಭಾಗದಲ್ಲಿ ಪಕ್ಷಿ ಸಂಕುಲಗಳು, ಸಮುದ್ರ ಜೀವಿಗಳು, ಅಳಿದುಳಿದ ಜೀವಿಗಳು, ಇತ್ಯಾದಿ ಈಗಾಗಲೇ ಸಾವನ್ನಪ್ಪಿವೆ. ಸಾಗರದೊಳಕ್ಕೆ ಸೋರಿಕೆಯಾಗಿರುವ ಪೆಟ್ರೋಲಿಯಂ ತೈಲವು ಸಸ್ಯಗಳ ಮೂಲಕ ಮಾನವ ಮತ್ತು ಇತರೆ ಜೀವಿಗಳ ದೇಹವನ್ನು ಸೇರಿ ಹಲವು ಕಾಯಿಲೆಗಳಿಗೆ ಕಾರಣವಾಗಲಿರುವುದು.

ಬಿಪಿ ಕಂಪನಿಯ ಒಡೆತನದಲ್ಲಿರುವ ಪೆಟ್ರೋಲಿಯಂ ಕಂಪನಿಯು ಇಂಥಹ ದುರ್ಘಟನೆಗೀಡಾಗಿರುವುದು ಇದೇ ಮೊದಲೇನಲ್ಲ. 1989ರಲ್ಲಿ ತೈಲ ಸಂಗ್ರಹಾಗಾರವೊಂದು ಸಿಡಿದು 40.0 ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಕ್ಕೆ ಸೋರಿಕೆಯಾಗಿ ಸೇರಿಹೋಗಿತ್ತು. ಈ ಘಟನೆಯ ಪರಿವೀಕ್ಷಣೆಯ ನಂತರ ತಿಳಿದುಬಂದದ್ದೇನೆಂದರೆ ಈ ಕಂಪನಿಯು ದುರ್ಘಟನೆಯಾದ ಸಂದರ್ಭದಲ್ಲಿ ಸೋರಿಕೆಯಾಗುವ ಪೆಟ್ರೋಲಿಯಂನ್ನು ಸಂಗ್ರಹಿಸಲು ದೊಡ್ಡ ರಬ್ಬರ್ ಬಿರಡೆಗಳನ್ನಾಗಲಿ, ಅಥವಾ ಅವಶ್ಯ ತಂಡಗಳನ್ನಾಗಲೀ ಸಿದ್ದಪಡಿಸಿರಲಿಲ್ಲ ಎಂಬುದು. ಈಗಾಗಲೇ ಸುಮಾರು 9.0 ಲಕ್ಷ ಲೀಟರ್ ಪೆಟ್ರೋಲಿಯಂ ಸಮುದ್ರದೊಳಕ್ಕೆ ಸೇರಿಹೋಗಿದೆ. ಈ ದುರ್ಘಟನೆಯಲ್ಲಿ ಸಿಲುಕಿ ಬದುಕುಳಿದವರು ಒಬ್ಬೊಬ್ಬರಾಗಿ ಉಸಿರು ಹೊರಡಿಸುತ್ತಿದ್ದು ಕಂಪನಿಯ ವ್ಯವಸ್ಥಿತ ಲೋಪಗಳು (ಅಂದರೆ ಉದ್ದೇಶಪೂರ್ವಕವಾಗಿ ಹಣ ಉಳಿಸುವ ಸಲುವಾಗಿ ಲೋಪಗಳನ್ನು ಸರಿಪಡಿಸದೆ ಹಾಗೆಯೇ ಉಳಿಸಿಕೊಂಡಿರುವುದು) ಹೊರಬೀಳುತ್ತಿವೆ. ದುರ್ಘಟನೆ ನಡೆದಾಕ್ಷಣವೇ ಕಂಪನಿಯು ತಮಗೇ ಗೊತ್ತಿಲ್ಲದ ಹಲವು ಹೇಳಿಕೆಗಳಿಗೆ ಬಲವಂತವಾಗಿ ತಮ್ಮಿಂದ ಸಹಿ ಮಾಡಿಸಿಕೊಳ್ಳುತ್ತಿದೆಯೆಂದು ಅವರು ದೂರುತ್ತಿದ್ದಾರೆ.
ಅಮೇರಿಕಾ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಗಣ್ಯಾತಿಗಣ್ಯರಲ್ಲಿ ಹಲವರು ಈ ಹಿಂದೆ ಬಿಪಿ ಕಂಪನಿಯಂಥದೇ ಅತಿ ದೊಡ್ಡ ದೈತ್ಯ ಕಂಪನಿಗಳಲ್ಲಿ ಕೆಲಸ ಮಾಡಿಬಂದವರೇ ಆಗಿರುತ್ತಾರೆ. ಸರ್ಕಾರದ ಹುದ್ದೆಗೆ ಬಂದ ನಂತರ ಅಂಥಹ ಕಂಪನಿಗಳಿಗೆ ಅವಶ್ಯವಿರುವ ಕಂಪನಿ ಪರವಾದ ಕಾಯಿದೆ ಮತ್ತು ನಿಯಮಾವಳಿಗಳನ್ನು ರೂಪಿಸುವುದು ಸಾಮಾನ್ಯ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಅಮೇರಿಕಾದ ಉಪಾಧ್ಯಕ್ಷನಾಗಿದ್ದ ಡಿಕ್ ಚೆನಿ ಈ ಮೊದಲು ಹಲ್ಲಿಬರ್ಟನ್ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದವನು. ಅಮೇರಿಕಾದ ಉಪಾಧ್ಯಕ್ಷನಾಗಿದ್ದಾಗ ತೈಲ ಕಂಪನಿಗಳು ಅತಿ ದುಬಾರಿ ಬೆಲೆಯ ಸುರಕ್ಷತಾ ಉಪಕರಣಗಳನ್ನು ಬಳಸುವ ಅಗತ್ಯವಿಲ್ಲವೆಂದು ವಿನಾಯಿತಿ ನೀಡಿದ್ದ. ಇಂಥಹ ಅವಘಡಗಳು ಹೆಚ್ಚಾಗಿ ಅಮೇರಿಕಾದಲ್ಲಿ ಸಂಭವಿಸುತ್ತಿರುವುದು ತಮ್ಮನ್ನು ಕಂಪನಿಗಳಿಗೆ ಮಾರಿಕೊಂಡಿರುವ ರಿಪಬ್ಲಿಕನ್ ಪಕ್ಷ ಆಳುತ್ತಿರುವ ರಾಜ್ಯಗಳಲ್ಲಿ.




ಈ ದುರ್ಘಟನೆಯಿಂದ ಕೋಪಗೊಂಡಿರುವ ಅಮೇರಿಕಾದ ಪ್ರಜೆಗಳು ತೈಲ ಕಂಪನಿಗಳ ವಿರುದ್ದ ಕೂಗು ಹಾಕುತ್ತಿದ್ದು, ಸರ್ಕಾರ ಕಂಪನಿಯ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ತೈಲ ಕಂಪನಿಗಳಿಗೆ ನೀಡಿದ್ದ ಇಂಥಹ ದೋಷಪೂರಿತ ವಿನಾಯಿತಿಗಳನ್ನು ತೆಗೆದುಹಾಕಲು ಒಬಾಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇಂಥಹ ದುರ್ಘಟನೆಗಳು ಸಂಭವಿಸಿದಾಗ ತೈಲ ಕಂಪನಿಗಳು ತೆರಬೇಕಾದ ದಂಡವನ್ನು ಪ್ರಸ್ತುತ ರೂ. 338 ಕೋಟಿಯಿಂದ ರೂ. 45,000 ಕೋಟಿಗೆ ಏರಿಸಲು ಅಮೇರಿಕಾದ ಪಾರ್ಲಿಮೆಂಟ್ ಕ್ರಮಕೈಗೊಂಡಿದೆ. ಆದರೆ, ನಮ್ಮ ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರ ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಪರಮಾಣು ಸ್ಥಾವರ ಅಳವಡಿಸುವ ಕಂಪನಿಗಳು ಅವಘಡ ಸಂಭವಿಸಿದಲ್ಲಿ ಕೇವಲ ರೂ. 2000ಕೋಟಿ ಯಷ್ಟನ್ನು ನೀಡಿ ಪರಾರಿಯಾಗುವುದಕ್ಕೆ ಅವಕಾಶ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.
***********